ಖಾಕಿ ಪಂಥ ಎನ್ನುವುದು ಉತ್ತರ ಭಾರತದ ವೈಷ್ಣವ ಪಂಥದಲ್ಲಿನ ಒಂದು ಉಪಪಂಥ. ಪಾರ್ಸಿ ಭಾಷೆಯಲ್ಲಿ ಖಾಕಿ ಎಂದರೆ ಬೂದಿ ಎಂದರ್ಥ. == ವೈಶಿಷ್ಟ್ಯಗಳು == ಈ ಜನ ಬೂದಿಯನ್ನು ಧಾರಣೆ ಮಾಡುತ್ತಾರಾಗಿ ಇವರಿಗೆ ಖಾಕಿ ಪಂಥದವರೆಂದು ಹೆಸರು ಬಂತು. ಇವರು ವೈಷ್ಣವರಾದರೂ ಕೆಲವು ಶೈವ ಪದ್ಧತಿಗಳನ್ನು ಅನುಸರಿಸುತ್ತಾರೆ. ಶೈವರಂತೆ ತಲೆಯ ಕೂದಲನ್ನು ಜಟೆಯಾಗಿ ಕಟ್ಟಿಕೊಳ್ಳುತ್ತಾರೆ. ಮೈಗೆಲ್ಲ ಬೂದಿ ಬಳಿದುಕೊಂಡು ಒಂದು ಲಂಗೋಟಿ ವಿನಾ ಬೇರೇನನ್ನೂ ಧರಿಸದೆ ಬರಿಮೈಯಲ್ಲಿ ತಿರುಗಾಡುತ್ತಾರೆ; ಲಕ್ಷ್ಮಣನ ಅನುಯಾಯಿಗಳೆಂದು ಹೇಳಿಕೊಳ್ಳುತ್ತಾರೆ. ರಾಮ ವನವಾಸ ಕೈಗೊಂಡಾಗ ಲಕ್ಷ್ಮಣ ಶೋಕಗೊಂಡು ಮೈಗೆಲ್ಲ ಬೂದಿ ಬಳಿದುಕೊಂಡನೆಂದೂ ಅವನ ಅನುಯಾಯಿಗಳಾದವರು ಅಂದಿನಿಂದ ಭಸ್ಮಧಾರಣೆ ಮಾಡುತ್ತ ಬಂದರೆಂದೂ ಈ ಪಂಥದವರು ಹೇಳಿಕೊಳ್ಳುತ್ತಾರೆ. ಇವರ ಪಂಥ ಹದಿನಾರನೆಯ ಶತಮಾನದಲ್ಲಿ ಹುಟ್ಟಿಕೊಂಡಿತು. ಕೃಷ್ಣದಾಸನ ಶಿಷ್ಯನಾದ ಕಿಲ್ಹ ಎಂಬಾತ ಇದರ ಸ್ಥಾಪಕ. ರಾಮಾನಂದನ ಶಿಷ್ಯ ಅನಂತಾನಂದ ಈ ಪಂಥವನ್ನು ಬೆಳೆಸಲು ಶ್ರಮಿಸಿದ. ಈ ಪಂಥದ ಮುಖ್ಯ ಕೇಂದ್ರ ಅಯೋಧ್ಯೆ. ಇಲ್ಲಿ ದಯಾರಾಮನೆಂಬುವನಿಂದ ಸ್ಥಾಪಿತವಾದ ಒಂದು ಮಠವಿದೆ. ಅಯೋಧ್ಯೆಯ ಹನುಮಾನ್ ದೇವಸ್ಥಾನದ ಅರ್ಚಕರು ಖಾಕಿಗಳು. ಗುಜರಾತಿನ ಲವಾವಾಡ ಎಂಬ ಸ್ಥಳದಲ್ಲೂ, ಅಹಮದಾಬಾದಿನಲ್ಲೂ ಖಾಕಿಗಳ ಮಠಗಳಿವೆ. == ಉಲ್ಲೇಖಗಳು ==